ಕಳೆದ 55 ವರ್ಷಗಳಿಂದ ದೇಶ-ವಿದೇಶಗಳಲ್ಲಿ 110ಕ್ಕೂ ಮಿಕ್ಕಿ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿ, ಕೊಂಕಣಿ ಜನರ ಮನೆ ಮಾತಾಗಿರುವ ಹೆಸರಾಂತ ಗಾಯಕ, ಗೀತೆ ರಚನೆಗಾರ ಶ್ರೀ ಮೆಲ್ವಿನ್ ಪೆರಿಸ್ರವರ ಚೊಚ್ಚಲ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಇದರ ಮುಹೂರ್ತವು ಫೆಬ್ರವರಿ 11ರಂದು ಭಾನುವಾರ ಸಂಜೆ 4 ಘಂಟೆಗೆ ಕುಲಶೇಖರ ಚರ್ಚಿನ ಮಿನಿ ಸಭಾಂಗಣದಲ್ಲಿ ನೆರವೇರಿತು. ʻಸಂಗೀತ್ ಘರ್ ಪ್ರೊಡಕ್ಶನ್ಸ್ʼ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುವ ಈ ಚಲನಚಿತ್ರದ ಶಿರೋನಾಮೆಯನ್ನು ದಾಯ್ಜಿವರ್ಲ್ಡ್ ಮಿಡಿಯಾ ಪ್ರೈ.ಲಿ. ಇದರ ಸ್ಥಾಪಕ ನಿರ್ಧೇಶಕ, ಖ್ಯಾತ ನಟ, ಕಲಾವಿದ ಶ್ರೀ ವಾಲ್ಟರ್ ನಂದಳಿಕೆ ಅವರು ಅನಾವರಣ ಗೊಳಿಸಿದರು.

ಈ ಸಂದರ್ಭದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘಟನೆ ʻಮಾಂಡ್ ಸೊಭಾಣ್ʼ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಲುವಿ ಪಿಂಟೊ, ಕುಲಶೇಖರ ಚರ್ಚಿನ ಧರ್ಮಗುರುಗಳಾದ ವಂ. ಫಾ. ಕ್ಲಿಪರ್ಡ್ ಫೆರ್ನಾಂಡಿಸ್, ನಿರ್ಮಾಪಕಿ ಶ್ರೀಮತಿ ನೀಟಾ ಜೆ. ಪೆರಿಸ್, ಮೆಲ್ವಿನ್ ಪೆರಿಸ್ ಹಾಗೂ ಈ ಚಲನಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತ ಶ್ರೀ ಜೊಯೆಲ್ ಪಿರೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿರೋನಾಮೆಯನ್ನು ಅನಾವರಣ ಗೊಳಿಸಿ ಮಾತನಾಡಿದ ಶ್ರೀ ನಂದಳಿಕೆ ಅವರು ʻಒರಿಯಡ್ದೊರಿ ಅಸಲ್ʼ ತುಳು ಚಲನಚಿತ್ರವು ತುಳು ಫಿಲ್ಮ್ ಇಂಡಸ್ಟ್ರಿಗೆ ಒಂದು ಮೈಲುಗಲ್ಲಾಗಿ, ನಂತರದ ತುಳು ಚಿತ್ರಗಳಿಗೆ ಹೇಗೆ ಪ್ರೇರಣೆಯಾಗಿ ಹೊರಹೊಮ್ಮಿತೋ, ಅದೇ ಮಾದರಿಯಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯ ʻಅಸ್ಮಿತಾಯ್ʼ ಕೊಂಕಣಿ ಚಲನ ಚಿತ್ರವು ಕೊಂಕಣಿ ಚಲನ ಚಿತ್ರೋಧ್ಯಮದಲ್ಲಿ ಒಂದು ಮೈಲಿಗಲ್ಲಾಗಿಯಿತು ಮಾತ್ರವಲ್ಲ, ಕೊಂಕಣಿ ಫಿಲ್ಮ್ ಇಂಡಸ್ಟ್ರಿಗೆ ಭದ್ರ ಬುನಾದಿ ಹಾಕಿಕೊಟ್ಟಿತು. ʻಪಯಣ್ʼ ಚಿತ್ರಕ್ಕೆ ಪ್ರೇರಣೆಯಾದ ಈ ಚಲನಚಿತ್ರ ಮುಂದಿನ ವರ್ಷಗಳಲ್ಲಿ ಕಡಿಮೆಯೆಂದರೂ 25 ಕೊಂಕಣಿ ಚಲನಚಿತ್ರಗಳಿಗೆ ಪ್ರೇರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಗೀತ ಕ್ಷೇತ್ರಕ್ಕೆ ಮಾತ್ರವಲ್ಲ ಭಕ್ತಿ ಸಂಗೀತಕ್ಕೂ ಅಪಾರ ಕೊಡುಗೆ ನೀಡಿರುವ ಮೆಲ್ವಿನ್ ಪೆರಿಸ್ ರವರ ಚೊಚ್ಚಲ ಕಾಣಿಕೆ ʻಪಯಣ್ʼ ಚಲನ ಚಿತ್ರವು ಕೂಡಾ ʻಅಸ್ಮಿತಾಯ್ʼ ಚಲನಚಿತ್ರದಷ್ಟೇ ಯಶಸ್ಸನ್ನು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲರೂ ಸೇರಿ ಮೆಲ್ವಿನ್ ಪೆರಿಸ್ ಅವರ ಈ ಪ್ರಯತ್ನವನ್ನು ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಥಿತಿಗಳಾದ ಶ್ರೀ ಲುವಿ ಪಿಂಟೊರವರು ಮಾತನಾಡಿ, ʻಮೆಲ್ವಿನ್ ಪೆರಿಸ್ ಓರ್ವ ಛಲವಾದಿ. ಆರಂಭಿಸಿದ್ದನ್ನು ಗುರಿಮುಟ್ಟಿಸುವವರೆಗೆ ವಿಶ್ರಮಿಸದಿರುವ ಕಲಾವಿದ, ಗಾಯಕ. ಮಾಂಡ್ ಸೊಭಾಣ್ ಸಂಸ್ಥೆಯು ಎಲ್ಲಾ ವಿಧದಲ್ಲಿಯೂ ಅವರಿಗೆ ಸಂಪೂರ್ಣ ಸಹಕಾರ ನೀಡಲಿದೆ” ಎಂದರು.
ಚಿತ್ರದ ನಿರ್ದೇಶಕ ಶ್ರೀ ಜೊಯೆಲ್ ಪಿರೇರಾ ಚಲನ ಚಿತ್ರದ ಬಗ್ಗೆ ಮಾತನಾಡಿ, ʻ ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಪ್ರಯಾಣ ಕಥೆ ಹೊತ್ತ ʻಪಯಣ್ʼ, ಯುವ ಸಂಗೀತಗಾರನೊಬ್ಬ ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ – ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾ, ಸಂಗೀತ ಕ್ಷೆತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಮೊದಲು ಸಂಗೀತ ಜೀವನದಲ್ಲಿ ತಾನು ಎದುರಿಸಿದ ಅನಿರೀಕ್ಷಿತ ಸವಾಲುಗಳ ಕಥೆಯನ್ನು ಕೇಂದ್ರಬಿಂದುವಾಗಿಸಿದೆʼ ಎಂದರು

ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಕೋರಿದ ಶ್ರೀ ಮೆಲ್ವಿನ್ ಪೆರಿಸ್ ತನಗೆ ಸಹಕರಿಸಿದ ಆಪ್ತರೆಲ್ಲರಿಗೂ, ತನ್ನ ಸಂಗೀತ ಜೀವನದುದ್ದಕ್ಕೂ ಪ್ರೋತ್ಸಾಹಿಸಿ ಹರಸುತ್ತಿರುವ ಕೊಂಕಣಿ ಜನತೆಗೆ ವಂದಿಸಿ, ʻಪಯಣ್ʼ ಚಲನಚಿತ್ರಕ್ಕೆ ಸಂಪೂರ್ಣ ಸಹಕಾರ ಕೋರಿದರು.
ಕಾರ್ಯಕ್ರಮವನ್ನು ವಂ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಮನು ಬಂಟ್ವಾಳ್ ಕಾರ್ಯಕ್ರಮ ನಿರ್ವಹಿಸಿದರು.





ಕಾರ್ಯಕ್ರಮದ ಕೊನೆಯಲ್ಲಿ ಚಲನಚಿತ್ರದ ಕಲಾವಿದರಿಗೆ ಮತ್ತು ತಾಂತ್ರಿ ವರ್ಗಕ್ಕೆ ಹೂ ನೀಡಿ ಗೌರವಿಸಲಾಯಿತು. ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಡೊ| ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ, ಶೈನಾ ಡಿʼಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಮತ್ತು ಇತರರಿದ್ದಾರೆ. ರೋಶನ್ ಡಿʼಸೋಜಾ, ಆಂಜೆಲೊರ್ ಇವರ ಸಂಗೀತ, ವಿ. ರಾಮಾಂಜನೆಯ ಇವರ ಛಾಯಾಗ್ರಹಣ ಮತ್ತು ಮೆವಿಲ್ ಜೊಯೆಲ್ ಪಿಂಟೊ ಇವರ ಸಂಕಲನವಿದೆ.




