“ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು – ಇಲ್ಲಿ ಜನವರಿ 14 ಹಾಗೂ 15 ರಂದು ಎರಡು ದಿನಗಳ ವಾರ್ಷಿಕ ಮಹೋತ್ಸವ ಶೃದ್ದೆ ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಮಹೋತ್ಸವಕ್ಕಾಗಿ ನವದಿನಗಳ ನೊವೇನಾ ಸಿದ್ಧತೆ ಭರದಿಂದ ನಡೆಯುತ್ತಿದೆ. ಜನವರಿ 5 ರಿಂದ ಜನವರಿ 13 ರ ವರೆಗೆ ನೊವೇನಾ ಪ್ರಾರ್ಥನೆಗಳು ನಡೆಯಲಿದ್ದು, ನೊವೇನಾ ದಿನಗಳಲ್ಲಿ ಪ್ರತಿದಿನ ದಿವ್ಯ ಬಲಿಪೂಜೆಗಳು ನಡೆಯಲಿದ್ದು, ಮಕ್ಕಳು, ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುವವರಿಗಾಗಿ ವಿಶೇಷ ಪ್ರಾರ್ಥನಾವಿಧಿಗಳು ಜರುಗಲಿವೆ. ಬಾಲಯೇಸುವಿನ ಭಕ್ತಾದಿಗಳು ಮಹೋತ್ಸವ, ನೊವೇನಾ ಮತ್ತು ವಿಶೇಷ ಪ್ರಾರ್ಥನಾವಿಧಿಗಳ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ” ಎಂದು ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ವಂ| ಸ್ಟೀಫನ್ ಪಿರೇರಾ, ಪತ್ರಿಕಾ ಭವನದ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ಜನವರಿ 14 ರಂದು ಸಂಜೆ 6.00 ಘಂಟೆಗೆ ಮಹೋತ್ಸವ ಸಂಭ್ರಮದ ಬಲಿಪೂಜೆಯನ್ನು ಜೈಪುರ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಒಸ್ವಾಲ್ಡ್ ಜೋಸೆಫ್ ಲೂವಿಸ್ ನೆರವೇರಿಸುವರು. ಅದೇ ದಿನ ಬೆಳಿಗ್ಗೆ 10.30 ಘಂಟೆಗೆ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ, ಅತ್ತೂರು-ಕಾರ್ಕಳ ಇದರ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜಾರವರು ನೆರವೇರಿಸುವರು. ಇದು ಅನಾರೋಗ್ಯದಿಂದ ಬಳಲುವವರಿಗಾಗಿ ಹಾಗೂ ಹಿರಿಯರಿಗಾಗಿ ವಿಶೇಷ ಪ್ರಾರ್ಥನಾವಿಧಿಯಾಗಿರುವುದು.” ಎಂದು ವಂ| ಸ್ಟೀಫನ್ ಪಿರೇರಾ ಮಾಹಿತಿ ನೀಡಿದರು.
“ಜನವರಿ 15ರಂದು ಬೆಳಿಗ್ಗೆ 10.30 ಘಂಟೆಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ ಬಲಿಪೂಜೆಯನ್ನು ನೆರವೇರಿಸಲಿರುವರು. ಇದು ಮಕ್ಕಳಿಗಾಗಿ ನೆರವೇರಿಸುವ ವಿಶೇಷ ಬಲಿಪೂಜೆಯಾಗಿರುವುದು. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿಯು ಸಂಜೆ 6.00 ಘಂಟೆಗೆ ಕಾರ್ಮೆಲ್ ಸಭೆಯ ಸಹಾಯಕ ಪ್ರಾಂತ್ಯಾಧಿಕಾರಿಯಾದ ಅತೀ ವಂದನೀಯ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಇವರು ನೆರವೇರಿಸಲಿರುವರು.”

“ಜನವರಿ 14ರಂದು, ವಾರ್ಷಿಕ ಹಬ್ಬದ ಮೊದಲ ದಿನ – ಬೆಳಿಗ್ಗೆ 6.00 (ಕೊಂಕಣಿ), 7.30 (ಇಂಗ್ಲಿಶ್), 9.00 (ಕೊಂಕಣಿ), 1.00 (ಕನ್ನಡ) – ಬಲಿಪೂಜೆಗಳು ನಡೆಯಲಿದ್ದು, 10.30 ಘಂಟೆಗೆ ಅನಾರೋಗ್ಯದಿಂದ ಬಳಲುವವರಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರಲಿರುವುದು. ಜನವರಿ 15 ರಂದು, ವಾರ್ಷಿಕ ಹಬ್ಬದ ಎರಡನೆಯ ದಿನ, ಬೆಳಿಗ್ಗೆ 6.30, 7.30, 9.00 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆಯು ನೆರವೇರಲಿರುವುದು.”
“ಎರಡು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ ನಡೆಯುತ್ತಿದ್ದು, ನೊವೇನಾ ಪ್ರಾರ್ಥನೆಯು ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ ಬಲಿಪೂಜೆಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲ್ಲಿ, ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲಿಶ್ ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು. ಈ ಒಂಬತ್ತು ದಿನಗಳ ಪ್ರಮುಖ ಬಲಿಪೂಜೆಯು ಸಂಜೆ 6.00 ಘಂಟೆಗೆ ಪುಣ್ಯಕ್ಷೇತ್ರದ ಮೈದಾನದಲ್ಲಿ ನಡೆಯಲಿರುವುದು. ಪ್ರತಿ ನೊವೇನಾ ದಿನಗಳಲ್ಲಿ 11.30 ರಿಂದ 12.45 ಘಂಟೆಯ ವರೆಗೆ ಕ್ರಿಸ್ತ ಪ್ರಸಾದದ ಆರಾಧನೆ ನಡೆಯಲಿದ್ದು ಈ ಸಂದರ್ಭದಲ್ಲಿ ವಿವಿಧ ಅಗತ್ಯಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.” ಎಂದು ವಂ| ಸ್ಟೀಫನ್ ಪಿರೇರಾ ತಿಳಿಸಿದರು.

“ಮಹೋತ್ಸವದ ಅಂಗವಾಗಿ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಘಂಟೆಗೆ ಕುಲಶೇಖರದ ಹೋಲಿಕ್ರಾಸ್ ಚರ್ಚಿನಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮ ಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು. ಜನವರಿ 5 ರಿಂದ 15ರ ವರೆಗೆ, ನೊವೇನಾ ಹಾಗೂ ಹಬ್ಬದ ದಿನಗಳಲ್ಲಿ, ಪ್ರತೀ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯುವುದು. ಜನವರಿ 11 ಮತ್ತು 12 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಶಿಬಿರವನ್ನು ಕೂಡಾ ಏರ್ಪಡಿಸಲಾಗಿದೆ” ಎಂದು ವಂ| ಸ್ಟೀಫನ್ ಪಿರೇರಾ ಮಾಧ್ಯಮ ಗೊಷ್ಠಿಯಲ್ಲಿ ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ – ವಂ| ಮೆಲ್ವಿನ್ ಡಿಕುನ್ಹಾ, ಬಾಲಯೇಸುವಿನ ಪುಣ್ಯಕ್ಷೇತ್ರದ ಗುರುಕುಲ ಮುಖ್ಯಸ್ಥರು, ವಂ| ದೀಪ್ ಫೆರ್ನಾಂಡೀಸ್, ಪ್ರಾಂತೀಯ ಪ್ರತಿನಿಧಿ, ಕಾರ್ಮೆಲ್ ಸಭೆ ಹಾಗೂ ವಂ| ರುಡಾಲ್ಫ್ ಡಿ’ಸೊಜಾ ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ 9844503706 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ವಂ| ಸ್ಟೀಫನ್ ಪಿರೇರಾ ಹೇಳಿದರು.




