“ಬಿಷಪರ ಕ್ರಿಸಮಸ್ ಬಂಧುತ್ವ ಕಾರ್ಯಕ್ರಮವು ನಾಡಿನ ಶಾಂತಿ-ಏಕತೆಗೆ ಪ್ರೋತ್ಸಾಹ. ಅದು ನಮ್ಮೋಳಗೆ ಬಲವಾದ ಬಾಂಧವ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಮತ್ತು ಸಮುದಾಯದ ಶಕ್ತಿಯ ಆಧಾರಸ್ತಂಭವಾಗಿದೆ. ಬಿಷಪ್ ಅವರ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ನನ್ನ ತಂದೆಯೊಂದಿಗೆ ಭಾಗವಹಿಸಿದ ಬಾಲ್ಯದ ನೆನಪುಗಳು ಆವಿಸ್ಮರಣೀಯ. ಇಂತಹ ಬಂಧುತ್ವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಆಚರಿಸಬೇಕು ಮತ್ತು ಸಮುದಾಯದ ಬಾಂಧವ್ಯವನ್ನು ಬಲವಾಗಿ ಬೆಳೆಸಲು ಪ್ರತಿ ಗ್ರಾಮ ಪಂಚಾಯತಿಯ ಮಟ್ಟಕ್ಕೆ ವಿಸ್ತರಿಸಬೇಕು. ಬಂಧುತ್ವವು ಸರ್ಕಾರಿ ಕಾರ್ಯಕ್ರಮವಾಗಿ ಹೊರಹೊಮ್ಮಬೇಕೆಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ.” ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್, ಶ್ರೀ ಯು.ಟಿ. ಖಾದರ್ ಹೇಳಿದರು.


ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆತೀ ವಂದನೀಯ ಡಾ। ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಡಿಸೆಂಬರ್ 30 ರಂದು ನಗರದ ಕೊಡಿಯಾಲ್ಬೈಲ್ ಬಿಷಪ್ ಹೌಸ್ನಲ್ಲಿ ಆಯೋಜಿಸಿದ ಬಂಧುತ್ವ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡ ಸರ್ಕಾರಿ ಅಧಿಕಾರಿಗಳನ್ನು, ಧಾರ್ಮಿಕ ಮುಖಂಡರನ್ನು ಮತ್ತು ಸಮುದಾಯದ ಪ್ರತಿನಿಧಿಗಳನ್ನು ಆವರು ಉದ್ದೇಶಿಸಿ ಮಾತಾನಾಡಿದರು.


“ಸಮಾಜಕ್ಕೆ ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಅಪಾರವಾಗಿದೆ. ಶತಮಾನದ ಹಿಂದೆ ಕುಷ್ಟ ರೋಗ ಮತ್ತು ಟಿಬಿ ರೋಗಿಗಳೊಂದಿಗೆ ಫಾದರ್ ಮುಲ್ಲರ್ ಅವರ ಪ್ರವರ್ತಕ ಕಾರ್ಯವು ಮಹತ್ವದ್ದಾಗಿದೆ” ಎಂದು ಶ್ರೀ ಯು. ಟಿ ಖಾದರ್ ಕ್ರೈಸ್ತ ಸಮುದಾಯವನ್ನು ಶ್ಲಾಘಿಸಿದರು.

ಬಿಷಪ್ ಪೀಟರ್ ಪಾವ್ಲ್ ತಮ್ಮ ಸ್ವಾಗತ ಭಾಷಣದಲ್ಲಿ ಮಾತನಾಡುತ್ತಾ “ಸಂಘರ್ಷದಿಂದ ನಲುಗಿರುವ ಜಗತ್ತಿನಲ್ಲಿ, ಯೇಸುವಿನ ಜನನವು ಶಾಂತಿಗೆ ನಾಂದಿ ಹಾಡಿತು, ಅವರ ಜೀವನ, ಬೋಧನೆಗಳು ಮತ್ತು ಅವರು ಬಿಟ್ಟುಹೋದ ಕ್ಷಮೆಯ ಪರಂಪರೆ ಶಾಂತಿಯ ಸಾರವಾಗಿದೆ. ಯೇಸುವಿನಿಂದ ಪ್ರೇರಿತಗೋಂಡ ಮಹಾತ್ಮ ಗಾಂಧಿಯವರು ಕ್ಷಮೆ ಮತ್ತು ಶಾಂತಿಯ ಜೀವನವನ್ನು ನಡೆಸಿದರು. ನಮ್ಮ ಹೃದಯದಿಂದ ಕ್ಷಮೆಯು ಹೊರಹೊಮ್ಮಿದಾಗ, ನಾವು ಶಾಂತಿಯ ದೂತರಾಗುತ್ತೇವೆ” ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳಾದ, ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಹಿಲನ್-ಐಎಎಸ್, ಪೊಲೀಸ್ ಕಮಿಷನರ್ ಶ್ರೀ ಅನುಪಮ್ ಅಗರ್ವಾಲ್-ಐಪಿಎಸ್, ಕಸ್ಟಮ್ಸ್ ಕಮಿಷನರ್ ಶ್ರೀಮತಿ ವಿನಿತಾ ಶೇಖರ್-ಐಆರ್ಸ್, ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್-(ಜಿಎಸ್ಟಿ) ಶ್ರೀ ಕೇಶವ ನಾರಾಯಣ ರೆಡ್ಡಿ, ಆದಾಯ ತೆರಿಗೆಯ ಆಯುಕ್ತರು ಶ್ರೀ ಎಸ್ ರಂಗರಾಜನ್, ಐಆರ್ಸ್, ಮತ್ತು ಶ್ರೀ ರಾಮಕೃಷ್ಣ ಮಿಷನ್ ಸೊಸೈಟಿಯ ಶ್ರೀ ರಘುರಾಮಾನಂದ ಅವರು ಬಂಧುತ್ವ ಆಚರಣೆಯಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದರು.














ಸಿಎಸ್ಐ ಚರ್ಚಿನ ಬಿಷಪ್ ಅತೀ ವಂದನೀಯ ಹೇಮಚಂದ್ರ ಕುಮಾರ್ ಅವರು ಪ್ರಾರ್ಥನೆಯೊಂದಿಗೆ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ಗಣ್ಯರು ಕ್ರಿಸ್ಮಸ್ ಆಚರಿಸಿ ಕೇಕ್ ಕತ್ತರಿಸುವ ಮಾಡುವ ಮೂಲಕ ಸಂತಸ ಹಂಚಿಕೊಂಡರು.
ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಹರೀಶ್ ಕುಮಾರ್, ಮಂಜೇಶ್ವರ ಶಾಸಕ ಎ ಕೆ ಅಶ್ರಫ್, ಮಾಜಿ ಶಾಸಕ ಜೆ ಆರ್ ಲೋಬೋ, ಮಾಜಿ ಎಂಎಲ್ಸಿ ಐವನ್ ಡಿ ಸೋಜಾ, ಮಿಥುನ್ ರೈ ಸೇರಿದಂತೆ ರಾಜಕೀಯ ಮುಖಂಡರು; ಸಾರ್ವಜನಿಕ ಆಡಳಿತದ ಗಣ್ಯರು, ನಗರದ ಕಾರ್ಪೊರೇಟರ್ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಐಎಎಸ್ ಮುಲ್ಲೈ ಮುಹಿಲನ್ ಮಂಗಳೂರಿನ ಅನನ್ಯತೆಗೆ ಮಂಗಳೂರು ಕ್ರೈಸ್ತ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದರು. ಕ್ರೈಸ್ತ ಸಮುದಾಯದ ವಿಶಿಷ್ಟ ಗುರುತಿನಿಂದಾಗಿ ಮಂಗಳೂರು ವಿಶಿಷ್ಟವಾಗಿದೆ. ಮಂಗಳೂರಿಗರು ತಮ್ಮ ವಿಶಿಷ್ಟತೆಯನ್ನು ಮೆರೆದಿದ್ದಾರೆ ಮತ್ತು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ, ಎಂಡು ಹೇಳಿದರು. ಮಂಗಳೂರಿನ ಭಾಗವಾಗಿರುವುದಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾ, “ಕ್ಷಮಿಸಿ, ಮರೆಯುವ ಮತ್ತು ನವೀಕೃತ ಭರವಸೆಯೊಂದಿಗೆ ಮುನ್ನಡೆಯುವ” ಪ್ರಾಮುಖ್ಯತೆಯನ್ನು ಒತ್ತಿ ಹೆಳುತ್ತಾ ಹೊಸ ವರುಷದ ಶುಭಾಶಯಗಳನ್ನು ಕೋರಿದರು.


ಮಂಗಳೂರಿನಲ್ಲಿ ಶಾಂತಿಯನ್ನು ಬಯಸುವ ಪೊಲೀಸ್ ಕಮಿಷನರ್ ಶ್ರೀ ಅನುಪಮ್ ಅಗರ್ವಾಲ್, “ಪೊಲೀಸ್ ಇಲಾಖೆಯಲ್ಲಿ ನಾವು ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲವಾದರೂ, ನಾವು ವ್ಯಕ್ತಿಗಳನ್ನು ಸುಧಾರಿಸಲು ಮತ್ತು ಅಪರಾಧದ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಸಮಾಜದ ಶಾಂತಿಗಾಗಿ ಪ್ರತಿನಿತ್ಯ ಪ್ರಾರ್ಥಿಸುತ್ತೇನೆ. ಇಲ್ಲಿ ನೆರೆದಿರುವವರು ಸಮಾಜದಲ್ಲಿ ಒಳ್ಳೆಯದನ್ನು ಮಾಡಲು ಪ್ರಭಾವಿ ಪಾತ್ರಗಳನ್ನು ಹೊಂದಿದವರಾಗಿದ್ದೀರಿ. ನಾನು ನಿಮಗೆಲ್ಲರಿಗೂ ಶಾಂತಿಯುತ ಹೊಸ ವರ್ಷದ 2024 ರ ಶುಭಾಶಯಗಳನ್ನು ಕೋರುತ್ತೇನೆ” ಎಂದು ಹೇಳಿದರು.


ಕಸ್ಟಮ್ಸ್ ಕಮಿಷನರ್ ಶ್ರೀಮತಿ ವಿನಿತಾ ಶೇಖರ್ ಅವರು ಮಂಗಳೂರು ನಗರದ ಕುರಿತು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾ, “ನಾನು ಮಂಗಳೂರಿನಲ್ಲಿ ನೆಲೆಸಿದ್ದೇನೆಯಾದರೂ, ನನಗೆ ಈ ನಗರ ನನ್ನ ತಾಯೂರಿನಂತೆ” ಎಂದು ಹೇಳಿದ ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಕ್ರಿಶ್ಚಿಯನ್ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದರು.




ಫಾದರ್ ಮುಲ್ಲರ್ ಸಂಸ್ಥೆಯ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಂದ ಬಹುಭಾಷಾ ಕ್ರಿಸ್ಮಸ್ ಹಾಡುಗಳು ಮತು ಕ್ರಿಸ್ಮಸ್ ನೃತ್ಯ ಪ್ರದರ್ಶನದಿಂದ ಈ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು. ರಾಕ್ಣೊ ವಾರಪತ್ರಿಕೆಯ ಸಂಪಾದಕರಾದ ಫಾ. ರೂಪೇಶ್ ಮಾಡ್ತಾ ಅವರು ಆಕರ್ಷಕ ಆಟಗಳ ಮೂಲಕ ಮನೋರಂಜಿಸಿದರು.



ಸಾಮಾಜಿಕ ಸಂಪರ್ಕಾಧಿಕಾರಿ ವಂದನೀಯ ಡಾ। ಜೆ.ಬಿ.ಸಲ್ಡಾನ್ಹಾ ಕೃತಜ್ಞತೆ ಸಲ್ಲಿಸಿದರು. ಬಿಷಪ್ ಪೀಟರ್ ಪಾವ್ಲ್ ಊಟಕ್ಕೂ ಮುನ್ನ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ವಿವಿದ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.












ಬಂಧುತ್ವ, ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಈ ವಿಶೇಷ ಕಾರ್ಯಕ್ರಮ, ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಉತ್ತೇಜಿಸುವ, ಸರ್ವಧರ್ಮ ಬಂಧಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.
■ ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್




