ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ, ಹರಿಪಾದಗೈದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಚತುರ್ಥ ಸಂಸ್ಮರಣಾರ್ಥ ನಡೆದ “ಪೇಜಾವರ ವಿಶ್ವೇಶತೀರ್ಥ ನಮನ” ಗುರುವಂದನ, ಪ್ರಶಸ್ತಿಪ್ರದಾನ ಮತ್ತು ಕೃಷ್ಣ ಗೀತಗಾಯನ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪೇಜಾವರ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ ಯನ್ನು ಯು ಎ ಇ ಯ ಹಿರಿಯ ಸಮಾಜಸೇವಕ, ಕಲಾ ಪೋಷಕ ಶ್ರೀ ಜೋಸೆಫ್ ಮಥಾಯಸ್ ಇವರಿಗೆ ಪೇಜಾವರ ಅಧೋಕ್ಷಜ ಮಠಾಧಿಪತಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಧಾನಗೈದರು.
ಶ್ರೀ ಜೋಸೆಫ್ ಮಥಾಯಸ್ ಇವರು ಜಾತಿ – ಮತ – ಭಾಷೆ ಎಂಬ ಬೇದಭಾವವಿಲ್ಲದೆ, ಕರ್ನಾಟಕದ ಎಲ್ಲಾ ಭಾಷಾ ಚಟುವಟಿಕೆಗಳಿಗೆ ನೀಡುವ ಸೇವೆಯನ್ನು ಪರಿಗಣಿಸಿ ‘ಹೊರನಾಡ ಬಹುಭಾಷಾ ಸೇವೆ’ ಕ್ಷೇತ್ರದಲ್ಲಿ ‘ಪೇಜಾವರ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಆರಂಭವಾದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ। ಎಂ. ಮೋಹನ್ ಆಳ್ವ ಪುಷ್ಪನಮನ ಸಲ್ಲಿಸಿದರು.
ಸಮಾರಂಭದಲ್ಲಿ ಶ್ರೀ ಶ್ರೀ ವೇಧವರ್ಧನ ತೀರ್ಥ ಶ್ರೀಪಾದರು ಶಿರೂರು ಮಠ, ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಚಿತ್ರಾಪುರ ಮಠ, ಸಾಹಿತಿ ಡಾ। ಲಕ್ಷ್ಮೀಶ ತೋಲ್ಪಾಡಿ, ಕಟೀಲು ಹರಿ ನಾರಾಯಣ ದಾಸ ಅಸ್ರಣ್ಣ, ಎಂ. ಉದಯ ಕುಮಾರ್ ಸರಳತ್ತಾಯ ಹಾಗೂ ಇತರ ಗಣ್ಯರು ಹಾಜರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಸನ್ಮಾನಿತರನ್ನು ಪರಿಚಯಿಸಿದರು.

ಮೂಲತಃ ಮಂಗಳೂರಿನ ಕುಪ್ಪೆಪದವು ನಿವಾಸಿಯಾಗಿರುವ ಶ್ರೀ ಜೋಸೆಫ್ ಮಥಾಯಸ್ ಅವರು ಮೆರಿಟ್ ಫ್ರೈಟ್ ಸಿಸ್ಟಮ್ಸ್ ಹೆಸರಿನಲ್ಲಿ ಗಲ್ಫ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಉದ್ಯಮಶಾಖೆಗಳನ್ನು ಹೊಂದಿದ್ದು, ಸಾಕಷ್ಟು ಜನರಿಗೆ ಉದ್ಯೋಗ ದಾತರರಾಗಿದ್ದಾರೆ. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕನಗರ ಯುವಕ ಸಂಘದ ಮೂಲಕ ಶಾಲಾ ಮಕ್ಕಳಿಗೆ ಸಮವಸ್ತ್ರ, ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಸ್ವ ಉದ್ಯೋಗಿಗಳಿಗೆ ಸೈಕಲ್, ಹೊಲಿಗೆ ಯಂತ್ರ ಹಾಗೂ ಅಶಕ್ತ ವರ್ಗದವರಿಗೆ ವೈದ್ಯಕೀಯ ನೆರವನ್ನು ತಮ್ಮ ಮಾತಾ ಪಿತರ ಸ್ಮರಣಾರ್ಥ ಕಳೆದ ಒಂದೂವರೆ ದಶಕದಿಂದ ನೀಡುತ್ತಲೇ ಬಂದಿರುತ್ತಾರೆ.
ಸ್ವತಃ ಉತ್ತಮ ಗಾಯಕರೂ, ನಟರೂ ಆಗಿರುವ ಶ್ರೀಯುತ ಜೋಸೆಫ್ ಮಥಾಯಸ್ ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ, ಕನ್ನಡ, ತುಳು ಹೀಗೆ ಎಲ್ಲಾ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೋಷಕರಾಗಿ ನೆರವಿನ ಹಸ್ತ ನೀಡುತ್ತಲೇ ಬಂದಿದ್ದಾರೆ. ತಮ್ಮ ಪ್ರತಿಭೆ ಮತ್ತು ಸಮಾಜ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀ ಜೋಸೆಫ್ ಮಥಾಯಸ್ ಅವರಿಗೆ ಶಾರ್ಜಾ ಕರ್ನಾಟಕ ಸಂಘ – ಮಯೂರ ಪ್ರಶಸ್ತಿ, ಗಲ್ಫ್ ಕನ್ನಡಿಗರ ಸಂಘ – ವಿಶ್ವ ಕನ್ನಡಿಗ ಪ್ರಶಸ್ತಿ ನೀಡಿ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಯುಎಇ ಘಟಕ ‘ಗಡಿನಾಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸ್ತುತ ಜೋಸೆಫ್ ಮಥಾಯಸ್ ಕುಟುಂಬ ಸಮೇತ ದುಬಾಯ್ಯಲ್ಲಿ ವಾಸವಾಗಿದ್ದಾರೆ.




