“ನಮ್ಮ ಜಗತ್ತಿನಲ್ಲಿ ದ್ವೇಷ, ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯ ಹಾಗೂ ಹಿಂಸೆಯು ತಾಂಡವವಾಡುತ್ತಿರುವುದನ್ನು ದಿನನಿತ್ಯವೂ ಕಾಣುತ್ತೇವೆ. ಯುದ್ದ, ಸಾವು ನೋವು ಹಾಗೂ ವಿನಾಶದ ದುರ್ಘಟನೆಗಳು, ಪ್ರಮುಖ ವಾರ್ತೆಗಳಾಗಿ ಹೊರಹೊಮ್ಮುತ್ತಿವೆ. ಪೋಪ್ ಪ್ರಾನ್ಸಿಸ್ ಇವರ ಮಾತುಗಳಲ್ಲಿ ಹೇಳುದಾದರೆ ನಾವು ಭಾಗಶಃ ಮೂರನೇ ಜಾಗತಿಕ ಮಹಾಯುದ್ಧದಲ್ಲಿ ಸದ್ದಿಲ್ಲದೆ ಮುನ್ನಡೆಯುತ್ತಿದ್ದೇವೆ. ಹತಾಶೆ ಹಾಗೂ ಆತ್ಮಹತ್ಯೆಗಳು ಏರಿಕೆಯಾಗುತ್ತಿವೆ. ನಾವೆಲ್ಲರೂ ನಿರಾಶಾದಾಯಕ ವಿಶ್ವದೆಡೆಗೆ ಮುಖ ಮಾಡಿದಂತೆ ಭಾಸವಾಗುತ್ತದೆ. ಧನ ಹಾಗೂ ಅಧಿಕಾರಾದಾಹವೇ, ಪ್ರಮುಖ ಅದ್ಯತೆಗಳಾಗಿರುವಂತೆ ತೋರುತ್ತದೆ. ಈ ಸಮಸ್ಯೆಗಳನ್ನು ಎದುರಿಸುವಲ್ಲಿ ಜನ ಸಾಮಾನ್ಯರಲ್ಲಿ ನಿರಾಸಕ್ತಿ ಹಾಗೂ ಅಲಕ್ಷವು ಅತೀರೇಕವಾಗಿದೆ. ಇದು ಸೆಲ್ಫಿಯುಗ ವಾಗಿ ಮಾರ್ಪಟ್ಟು ಪ್ರತಿಯೊಬ್ಬರು ತಮ್ಮದೆ ಒಳಿತಿನತ್ತ ಗಮನ ಹರಿಸುತ್ತಿದ್ದಾರೆ. ಇವೆಲ್ಲವುಗಳಿಂದಲೂ ನಿಜವಾದ ಬಿಡುಗಡೆ ಹಾಗೂ ಪರಿಹಾರ ಕಷ್ಟ ಸಾಧ್ಯವಾಗಿದೆ.” ಎಂದು ಮಂಗಳೂರು ರೋಮನ್ ಕಥೊಲಿಕ್ ಧರ್ಮಕ್ಷೇತ್ರದ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ಹಂಚಿಕೊಂಡರು.

ಕೊಡಿಯಾಳ್ಬಯ್ಲ್ ಬಿಷಪ್ಪರ ನಿವಾಸದಲ್ಲಿ ಗುರುವಾರ, ಡಿಸೆಂಬರ್ 21 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ” ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ಕ್ರಿಸ್ಮಸ್ ಅಂದರೆ ಯೇಸು ಕ್ರಿಸ್ತರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬವು ದೇವರು ನಮ್ಮೊಂದಿಗೆ ಎಂಬ ಅನುಭವವನ್ನು ನಮಗೆ ನೀಡುತ್ತದೆ. ಯೇಸು ಜನಿಸಿದ ಸಮಯದಲ್ಲಿ ದೇವದೂತನು ಕುರಿಗಾಹಿಗಳಿಗೆ ಈ ಸಂದೇಶವನ್ನು ಸಾರಿದನು ಭಯಪಡಬೇಡಿರಿ, ಇಗೋ ನಾನು ನಿಮ್ಮಗೆಲ್ಲಾ ಸಂತೋಷದ ಸುವಾರ್ತೆಯನ್ನು ತಂದಿರುತ್ತೇನೆ, ಅದೇನೆಂದರೆ, ಇಂದೇ ದಾವಿದಾನ ಊರಿನಲ್ಲಿ ನಿಮಗೋಸ್ಕರ ಲೋಕೊದ್ಧಾರಕ ಜನಿಸಿದ್ದಾರೆ. ಅವರೇ ಯೇಸುಕ್ರಿಸ್ತ (ಲೂಕ: 2:10-11) ಈ ಕುರಿಗಾಹಿಗಳು ರೋಮ್ ಅಧಿಪತ್ಯದ ಶೋಷಿತ ಸಮಾಜದಲ್ಲಿ ಜೀವಿಸುತ್ತಿದ್ದರು. ಸಾವು ನೋವುಗಳಿಂದ ಕತ್ತಲೆ ಹೊಂದಿದ ಸಮಾಜವು ಅದಾಗಿತ್ತು.” ಎಂದು ಡಾ| ಸಲ್ಡಾನ್ಹಾ ನುಡಿದರು.


“ಕುರಿಗಾಹಿಗಳು ಶೋಷಣೆಯಿಂದ ಬಿಡುಗಡೆಗೊಳ್ಳುವ ಶುಭವಾರ್ತೆಯ ನೀರೆಕ್ಷೆಯಲ್ಲಿದ್ದರು. ಅಂಥವರ ಹೃದಯಗಳಲ್ಲಿ ಪ್ರೀತಿ, ಕ್ಷಮೆ ಪ್ರಾರ್ಥನೆ ಹಾಗೂ ತಪಸ್ಸಿನ ಮೂಲಕ ವೈರತ್ವವನ್ನು ಕೊನೆಗೊಳಿಸುವ ಸಾಧನವನ್ನು ಯೇಸು ತೋರಿಸಿದರು. ನುಡಿದಂತೆ ನಡೆದು ಬೋಧಿಸಿದನ್ನು ಅಭ್ಯಾಸ ಮಾಡಿದರು. ವೈರಿಯನ್ನು ಪ್ರೀತಿಯಿಂದ ಗೆಲ್ಲುವ ಹಾದಿಯು ಮಾತ್ರ ನಿತ್ಯವಾದುದು.”
“ಯೇಸುವಿನ ಜನನವು ಅತ್ಯಾನಂದದ ವಿಷಯವಾಗಿದೆ, ಏಕೆಂದರೆ ಅವರು ನಮ್ಮಲ್ಲಿ ನವಜೀವನದ ಭರವಸೆಯನ್ನು ಬಿತ್ತುತ್ತಾರೆ. ನಮ್ಮ ದುಃಖದುಗುಡಗಳಲ್ಲಿ ಜೊತೆಜೊತೆಯಾಗಿ ನಡೆದು ಅರ್ಥಭರಿತ ಜಿವನವನ್ನು ನಡೆಸಲು ನೆರವಾಗುತ್ತಾರೆ. ಸಾವು ನೋವುಗಳಿಂದ ಕೂಡಿದ ನಮ್ಮ ಸನ್ನಿವೇಶದಲ್ಲಿ ಯೇಸುವು ಶಾಂತಿಯ ಕುವರ ರಾಗಿ ಕಾಣಿಸುತ್ತಾರೆ. ಕ್ಷಮೆ ಹಾಗೂ ಪ್ರೀತಿ ಇಲ್ಲದೆ, ಶಾಂತಿಯು ಅಸಾಧ್ಯಾವೆಂದು ತೋರಿಸುತ್ತಾರೆ. ಈ ಜಗವನ್ನು ಸರ್ವ ಜನರ ಶಾಂತಿಯ ತೋಟವನ್ನಾಗಿ ಮಾಡಬೇಕಾದರೆ, ನಾವು ನಿರ್ಲಕ್ಷ ಹಾಗೂ ನಿರಾಸಕ್ತಿಯನ್ನು ತೋರಿಸದೆ ಪ್ರೀತಿ ಹಾಗೂ ಕ್ಷಮೆಯನ್ನು ಹೊಂದಿದವರಾಗಿ ಇತರ ಜೀವನದಲ್ಲಿ ಹೊಸ ದೀಪವನ್ನು ಹಚ್ಚೋಣ.”



“ಇವುಗಳಿಂದ ಅಂತರಿಕ ಅನಂದದ ಚಿಲುಮೆಯು ಹರಿಯಲು ಸಾಧ್ಯ. ಜೀವನದಲ್ಲಿ ನಿರಾಶರಾದವರಲ್ಲಿ ಪುನಶ್ಚೇತನ ಮೂಡಿಸಲು ಯೇಸುವು ನಮಗೆ ಕರೆ ಕೊಡುತ್ತಾರೆ. ಕೇವಲ ಒಬ್ಬರಲ್ಲದಾರೂ ಇಂಥಹ ಭರವಸೆಯನ್ನು ಮೂಡಿಸುವುದರಲ್ಲಿ ನಾವು ಯಶ್ವಸಿಯಾದರೆ, ಅದು ದೊಡ್ಡ ಸಾಧನೆಯೇ ಸರಿ. ನಾವು ಜನರ ಹೃನ್ಮನಗಳನ್ನು ಉತ್ತುಂಗಕ್ಕೇರಿಸುವ ವ್ಯಕ್ತಿಗಳಾಗೋಣ. ಹತಾಶ ಜಗತ್ತಿನಲ್ಲಿ ಭರವಸೆಯನ್ನು ಬಿತ್ತೊಣ.” ಎಂದು ಬಿಷಪ್ ಪೀಟರ್ ಪಾವ್ಲ್ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದರ್ಮಕ್ಷೇತ್ರದ ಶ್ರೇಷ್ಠಗುರು ಮೊ| ಮ್ಯಾಕ್ಸಿಂ ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ಜೆ. ಬಿ. ಸಲ್ದಾನ್ಹಾ, ಪಾಲನಾ ಪರಿಷತ್ ಕಾರ್ಯದರ್ಶಿ ಡಾ| ಜಾನ್ ಡಿಸಿಲ್ವ ಮತ್ತಿತರು ಹಾಜರಿದ್ದರು.




