ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸುಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ‘ಕ್ರಿಸ್ತ ಜಯಂತಿ ಜುಬಿಲಿ 2025’ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳಿಗೆ ಚಾಲನೆ ನಡೆಯುತ್ತಿದ್ದು ಮಂಗಳೂರಿನ ರೋಮನ್ ಕಥೋಲಿಕ್ ಧರ್ಮಕ್ಷೇತ್ರದಲ್ಲಿಯೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಅತೀ ವಂದನೀಯ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ನಗರದ ಹೋಲಿ ರೋಜರಿ ಕೆಥೆಡ್ರಲ್ನಲ್ಲಿ ನವೆಂಬರ್ 26, 2023 ರಂದು ‘ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ ಅನಾವರಣದೊಂದಿಗೆ ವಿಧ್ಯುಕ್ತ ಚಾಲನೆ ನೀಡಿದರು.

ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ ಅವರು ಜಯಂತ್ಯುತ್ಸವಕ್ಕೆ ಸಮರ್ಪಿತವಾದ ಪ್ರಾರ್ಥನೆಯನ್ನು, ಯಾಜಕರೊಂದಿಗೆ ಮತ್ತು ನೆರೆದ ವಿಶ್ವಾಸಿಗಳೊದಿಗೆ ಪಠಿಸಿದರು. ನಂತರ ಜುಬಿಲಿ ಗೀತೆಯನ್ನು ಹಾಡಲಾಯಿತು. ಬಿಷಪ್ ಸಲ್ಡಾನ್ಹಾ ಅವರು 2025 ರ ಜುಬಿಲಿ ಮಹತ್ವವನ್ನು ಹೇಳುತ್ತಾ “ಇತಿಹಾಸವನ್ನು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ವಿಭಜಿಸಲಾಗಿದೆ. ಪ್ರತಿಯೊಂದು ವರ್ಷವು ಯೇಸುವಿನ ಜನನದಿಂದ ಗುರುತಿಸಲ್ಪಡುತ್ತದೆ. ಯೇಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗುತ್ತಿವೆ. ಮುಂಬರುವ ಈ ಸಾಮಾನ್ಯ ಜುಬಿಲಿಯೊಂದಿಗೆ, ನಾವು ಯೇಸು ಕ್ರಿಸ್ತರನ್ನು, ನಮ್ಮ ಧರ್ಮಸಭೆಯನ್ನು ಮತ್ತ್ತು ನಮ್ಮ ವಿಶ್ವಾಸವನ್ನು ಆಚರಿಸುವ ಗುರಿಯನ್ನು ಹೊಂದಿದ್ದೇವೆ. ಈ ಎರಡು ವರ್ಷಗಳ ಪೂರ್ವಸಿದ್ಧತೆಯಲ್ಲಿ 2023 ಅನ್ನು ಕಲಿಕೆಯ/ಅಧ್ಯಯನದ ವರ್ಷ ಎಂದು ಮತ್ತು 2024 ಅನ್ನು ಪ್ರಾರ್ಥನೆಯ ವರ್ಷ ಎಂದು ಆಚರಿಸುತ್ತೇವೆ” ಎಂದು ಹೇಳಿದರು.
ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ರವರು ಕಲಿಕಾ ವರ್ಷದಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್ನ ನಾಲ್ಕು ಸಂವಿಧಾನಗಳ ಅಧ್ಯಯನವನ್ನು ನಡೆಸಲು ನಿರ್ದೇಶಿಸಿದ್ದಾರೆ. ಈ ಸಂವಿಧಾನಗಳ ಆಧ್ಯಯನದಿಂದ ನಮ್ಮ ವಿಶ್ವಾಸವನ್ನು ಆಳವಾಗಿ ಆರಿಯಲು ಮತ್ತು ಪ್ರಾರ್ಥನಾಸ್ಪೂರ್ತಿಯಿಂದ ಈ ಜಯಂತಿಯನ್ನು ಆಚರಿಸಲು ನಮಗೆ ಕರೆ ನೀಡಿದ್ದಾರೆ – ಎಂದು ಬಿಷಪ್ ಒತ್ತಿ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಕೆಥೆಡ್ರಲ್ನ ರೆಕ್ಟರ್ ವಂದನೀಯ ಆಲ್ಫ್ರೆಡ್ ಜೆ. ಪಿಂಟೊ, ವಂದನೀಯ ವಿನೋದ್ ಲೋಬೋ, ವಂದನೀಯ ಸಂತೋಷ್ ಡಿಸೋಜ, ವಂದನೀಯ ಹ್ಯಾರಿ ಡಿಸೋಜ, ವಂದನೀಯ ತ್ರಿಶಾನ್ ಡಿಸೋಜ, ಡಾ. ಜೋನ್ ಡಿಸಿಲ್ವ ಹಾಜರಿದ್ದರು.

ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಎಲ್ಲಾ ಚರ್ಚ್ಗಳಲ್ಲಿ ಏಕಕಾಲದಲ್ಲಿ ಈ ಉದ್ಘಾಟನಾ ಸಮಾರಂಭವನ್ನು ನಡೆಸಿ ಜುಬಿಲಿ ಲಾಂಛನವನ್ನು ಅನಾವರಣಗೊಳಿಸಲಾಯಿತು, ಸಮರ್ಪಿತ ಪ್ರಾರ್ಥನೆಗಳನ್ನು ಪಠಿಸಿ, ಜುಬಿಲಿ ಗೀತೆಯನ್ನು ಹಾಡಿದರು. ಪ್ರತೀ ಚರ್ಚುಗಳಲ್ಲಿ ಯಾಜಕರು ಲಾಂಚನದ ಮಹತ್ವವನ್ನು ಮತ್ತು ಅದರ ಸಂಕೇತವನ್ನು ಸಭೆಗೆ ವಿವರಿಸಿದರು. ಜೊತೆಗೆ, ಜುಬಿಲಿ 2025 ರ ಬಗ್ಗೆ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಒಂದು ಕಿರು ವೀಡಿಯೊ ಸಂದೇಶವನ್ನು ಸಭೆಗೆ ನೀಡಲಾಯಿತು.
■ ಚಿತ್ರ – ವರದಿ : ವಂದನೀಯ ಅನಿಲ್ ಫೆನಾಂಡಿಸ್




